AI

ಕನ್ನಡದ ಬೆಳವಣಿಗೆಗೆ ಕೃತಕ ಬುದ್ಧಿಮತ್ತೆಯ ಕೊಡುಗೆ

ಈ ಹೊಸ ಯುಗದಲ್ಲಿ, AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ? AI ಅನ್ನು ಕನ್ನಡದ ಬೆಳವಣಿಗೆಗೆ ಹೇಗೆ ಬಳಸಬಹುದು? ಭಾರತ/ಕರ್ನಾಟಕ ಸರಕಾರ ಹಾಗು ಇಲ್ಲಿನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು AI ಅನ್ನು ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ತಿಳಿಸಿಕೊಡಲಿದ್ದೇನೆ

ಕನ್ನಡ ರಾಜ್ಯೋತ್ಸವದ ಸಂಭ್ರಮ ಮತ್ತೊಮ್ಮೆ ನಮ್ಮೆಲ್ಲರ ಹೃದಯಗಳಲ್ಲಿ ತುಂಬಿದೆ, ಇದು ಕೆಂಪು–ಹಳದಿ ಧ್ವಜಗಳು ಹಾರಾಡುವ ಕಾಲ, ಕನ್ನಡ ಗೀತೆಗಳು ಎಲ್ಲೆಡೆ ಮೊಳಗುವ ಕಾಲ. ಇದೆ ನವೆಂಬರ್ ೧ ರಂದು ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮವೊಂದರಲ್ಲಿ ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು “ಮಾಹಿತಿ ತಂತ್ರಜ್ಞಾನದ ಯುಗ ಈಗ ಕೃತಕ ಬುದ್ಧಿಮತ್ತೆಯ(Artificial Intelligence ಅಥವಾ AI)  ಯುಗವಾಗಿ ಪರಿವರ್ತನೆಯಾಗುತ್ತಿದೆ. ಈ ಹೊಸ ತಾಂತ್ರಿಕ ಸವಾಲನ್ನು ಎದುರಿಸಲು ನಾವು ಕನ್ನಡವನ್ನು ಸಿದ್ಧಪಡಿಸಬೇಕು” ಎಂದು ಘೋಷಣೆ ಮಾಡಿದರು. ಇದು ಕೇವಲ ಸಾಂಕೇತಿಕ ಮಾತಲ್ಲ. ಇದು ನಮ್ಮ ಕನ್ನಡದ ಭವಿಷ್ಯದ ಪ್ರಶ್ನೆ. ಈ ಹೊಸ ಯುಗದಲ್ಲಿ, AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ? AI ಅನ್ನು ಕನ್ನಡದ ಬೆಳವಣಿಗೆಗೆ ಹೇಗೆ ಬಳಸಬಹುದು? ಭಾರತ/ಕರ್ನಾಟಕ ಸರಕಾರ ಹಾಗು ಇಲ್ಲಿನ ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು AI ಅನ್ನು ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳ ಬಗ್ಗೆ ನೋಡೋಣ. ನಾನು AI ತಂತ್ರಜ್ಞಾನದ ಕುರಿತು ಇಪ್ಪತ್ತಕ್ಕೂ ಹೆಚ್ಚು ಲೇಖನಗಳನ್ನು ಬರೆದಿದ್ದೇನೆ, ಅದನ್ನು ನೀವು ನನ್ನ ದ್ವಿಭಾಷಾ ಬ್ಲಾಗ್ www.cybermithra.in ನಲ್ಲಿ ಓದಬಹುದು. 

AI ಕನ್ನಡಕ್ಕೆ ಮಾರಕವೇ ಅಥವಾ ಪೂರಕವೇ ?

“AI ಬಂದರೆ ಎಲ್ಲವೂ ಇಂಗ್ಲೀಷ್ ಮಯವಾಗಿಬಿಡುತ್ತದೆ, ಕನ್ನಡ ಸಾಯುತ್ತೆ!”, ಇದು ಹಲವು ಜನರ ಅಭಿಪ್ರಾಯ. ಈ ಆತಂಕ ಸಂಪೂರ್ಣ ಸುಳ್ಳಲ್ಲಾ ಯಾಕೆಂದರೆ :

  • ಬಹುತೇಕ ಜನಪ್ರಿಯ AI ಮಾದರಿಗಳು (ChatGPT, Gemeni, ಇತ್ಯಾದಿ) ಹೆಚ್ಚಾಗಿ ಇಂಗ್ಲೀಷ್‌ ಭಾಷೆಯ ಮೇಲೆ ತರಬೇತಿ ಪಡೆದಿವೆ.
  • ಕನ್ನಡ ಸೇರಿದಂತೆ ಭಾರತೀಯ ಭಾಷೆಗಳಿಗಳಲ್ಲಿ AI ಮಾದರಿಗಳಿಗೆ ತಕ್ಕ ಪ್ರಮಾಣದ ಡೇಟಾ ಲಭ್ಯವಿಲ್ಲದಿರುವುದು ಇದಕ್ಕೆ ಒಂದು ಪ್ರಮುಖ ಕಾರಣ.
  • ಜನಪ್ರಿಯ AI ಮಾದರಿಗಳು ಕನ್ನಡದ ವ್ಯಾಕರಣ, ಆಳ, ಸೂಕ್ಷ್ಮತೆ, ಸಾಂಸ್ಕೃತಿಕ ಅರ್ಥ, ಉಚ್ಛಾರಣೆ, ವೈವಿಧ್ಯ  — ಇವುಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳಲು ಇನ್ನೂ ತಯಾರಾಗಿಲ್ಲ.

ಇದರ ಪರಿಣಾಮ – AI ಗೆ ಕನ್ನಡ ಸರಿಯಾಗಿ ಬರುವುದಿಲ್ಲಾ ಎಂದು ಸಾಮನ್ಯ ಜನರು ಡಿಜಿಟಲ್ ವ್ಯವಹಾರಗಳಲ್ಲಿ ಕನ್ನಡ ಬಳಕೆಯಿಂದ ದೂರ ಹೋಗಬಹುದು. ಆದರೆ ಇದೇ AIಯನ್ನು ನಾವು ಸರಿಯಾಗಿ ‘ಟ್ರೈನ್’ ಮಾಡಿದರೆ, ಅದು ಕನ್ನಡಕ್ಕೆ ಅದ್ಭುತವಾಗಿಯೂ ಕೆಲಸ ಮಾಡಬಲ್ಲದು ಮತ್ತು ಕನ್ನಡಕ್ಕೆ ಪೂರಕವೂ ಆಗಬಹುದು, ಹೇಗೆಂದರೆ :

  • ಕನ್ನಡ ಕಲಿಯಬೇಕು ಎನ್ನುವ ಬೇರೆ ಭಾಷೆಯವರಿಗೆ ಅಥವಾ ನಮ್ಮದೇ ಮಕ್ಕಳಿಗೆ AI  ಖಾಸಗಿ ಶಿಕ್ಷಕನಾಗಬಹುದು. AI ಪ್ರಶ್ನೆ–ಉತ್ತರ, ಪಾಠ ವಿವರಣೆ, ಕವನ ವ್ಯಾಖ್ಯಾನಗಳ ಮೂಲಕ ಕನ್ನಡದ ಕಲಿಕೆಗೆ ಸಹಾಯ ಮಾಡಬಹುದು.
  • ನಮ್ಮ ಹಳೆಗನ್ನಡ, ವಚನ ಸಾಹಿತ್ಯ, ದಾಸರ ಪದಗಳು, ಕವನಗಳನ್ನು ಡಿಜಿಟಲ್ ರೂಪಕ್ಕೆ ತಂದು, ವಿಶ್ಲೇಷಿಸಿ/ವ್ಯಖ್ಯಾನಿಸಿ, ಮುಂದಿನ ಪೀಳಿಗೆಗೆ ಸಂರಕ್ಷಿಸಲು AI ನಮಗೆ ಸಹಾಯ ಮಾಡಬಹುದು.
  • AI ಕನ್ನಡದಿಂದ ಇತರ ಭಾಷೆಗೆ, ಇತರ ಭಾಷೆಯಿಂದ ಕನ್ನಡಕ್ಕೆ ಸುಲಭವಾಗಿ ಅನುವಾದ ಮಾಡುವ ಮೂಲಕ ಹೆಚ್ಚು ಜನರಿಗೆ ತಲುಪುವ ಕೆಲಸ ಮಾಡಬಹುದು.
  • ಕನ್ನಡದ ಕಾವ್ಯ, ಕತೆ, ಜಾನಪದ ಗೀತೆಗಳನ್ನು AI ಅನಿಮೇಶನ್ ಅಥವಾ ಧ್ವನಿಯಾಗಿ ಹೊಸ ತಲೆಮಾರಿಗೆ ತಲುಪಿಸಬಹುದು.

ಈ ಪೂರಕಗಳು ನಿಜವಾಗಬೇಕಾದರೆ ನಾವು, ನೀವು ಮತ್ತು ಸರಕಾರ :

  • ಕನ್ನಡದಲ್ಲಿ AI ಬಳಕೆ ಹೆಚ್ಚಿಸಬೇಕು — ಪ್ರಶ್ನೆಗಳು, ಹುಡುಕು, ಬರವಣಿಗೆ ಎಲ್ಲದಲ್ಲೂ AI ನಲ್ಲಿ ಕನ್ನಡಕ್ಕೆ ಆದ್ಯತೆ ನೀಡಬೇಕು.
  • ಕನ್ನಡದ ಸಾಹಿತ್ಯ, ಲೇಖನಗಳು, ಪಾಠಪುಸ್ತಕಗಳನ್ನು AI ತರಬೇತಿಗೆ ನೀಡಲು ಸರ್ಕಾರ ಮತ್ತು ವಿಶ್ವವಿದ್ಯಾಲಯಗಳು ಅವುಗಳ ಡಿಜಿಟಲೀಕರಣಕ್ಕೆ ಮುಂದಾಗಬೇಕು.
  • ಕನ್ನಡ ಶಾಲೆಗಳು, ಪತ್ರಿಕೆಗಳು, ಟಿವಿಗಳು, ಬ್ಲಾಗ್‌ಗಳು — ಎಲ್ಲವು ಕನ್ನಡದ AI ಮಾದರಿಗಳ ಬಳಕೆಯನ್ನು ಉತ್ತೇಜಿಸಬೇಕು, ಯಾಕೆಂದರೆ ಬಳಕೆ ಹೆಚ್ಚಾದಂತೆ ಕನ್ನಡಕ್ಕೆ AI ಮಾದರಿಗಳ ಪ್ರತಿಕ್ರಿಯೆಯ ಗುಣಮಟ್ಟ ಕೂಡ ಹೆಚ್ಚಾಗುತ್ತದೆ.
  • AI ಕೇವಲ ಬೆಂಗಳೂರು-ಮೈಸೂರು ಕನ್ನಡವನ್ನು ಕಲಿತರೆ ಸಾಲದು, ಕನ್ನಡಕ್ಕೆ ಇಪತ್ತಕ್ಕೂ ಹೆಚ್ಚು ವೈವಿಧ್ಯಗಳಿವೆ ಮತ್ತು ಅನೇಕ ಉಪಬಾಷೆಗಳಿವೆ(ತುಳು, ಕೊಂಕಣಿ, ಕೊಡವ ಇತ್ಯಾದಿ). ಹಾಗಾಗಿ AI ಅನ್ನು ನಾವೆಲ್ಲರೂ ಈ ವೈವಿಧ್ಯತೆ ಮತ್ತು ಉಪ ಭಾಷೆಗಳನ್ನು ಕಳಿಸಿ ಅವುಗಳನ್ನು ಹೆಚ್ಚಾಗಿ ಬಳಸಬೇಕು.

ಹೀಗಾಗಿ ಉತ್ತರ ಸರಳ, AI ಕನ್ನಡಕ್ಕೆ ಮಾರಕವಲ್ಲ, ಪೂರಕವೂ ಆಗಬಹುದು. ನಾವು ಕನ್ನಡಿಗರು ಈ AI ಅನ್ನು ‘ಕನ್ನಡ ಮನಸ್ಸಿನಿಂದ’ ರೂಪಿಸಿದರೆ, ಕನ್ನಡವು ಈ ಹೊಸ ಟೆಕ್ ಯುಗದಲ್ಲಿ ಮತ್ತಷ್ಟು ಶ್ರೀಮಂತವಾಗಿ ಬೆಳೆಯುತ್ತದೆ, ಹೊಸ ಜೀವ ಪಡೆಯುತ್ತದೆ.

ಕನ್ನಡಕ್ಕಾಗಿಯೇ ರಚಿಸಿದ AI ದೊಡ್ಡ ಭಾಷಾ ಮಾದರಿಗಳು(LLM) ಯಾವುವು ?

ಈಗ ಅನೇಕ ಜಾಗತಿಕ ದೊಡ್ಡ ಭಾಷಾ ಮಾದರಿಗಳು(ChatGPT, Gemeni ಇತ್ಯಾದಿ) ಕನ್ನಡ ಭಾಷೆಯಲ್ಲಿ ತರಬೇತಿ ಪಡೆದಿದ್ದು, ಬಹುತೇಕ ಸಾಮಾನ್ಯ ಪ್ರಶ್ನೆಗಳಿಗೆ  ಅದು ಕನ್ನಡಲ್ಲಿಯೇ ಸಮರ್ಪಕವಾಗಿ ಉತ್ತರವನ್ನು ಕೊಡುತ್ತಿದೆ ಮತ್ತು ನೀವು ಅದರೊಂದಿಗೆ ಕನ್ನಡದಲ್ಲೇ ಮಾತುಕತೆ ನಡೆಸಬಹುದು. ಕೇಂದ್ರ ಸರಕಾರ ತನ್ನ ಪ್ರಮುಖ ಭಾಷಾ ಸಂಶೋಧನಾ ಸಂಸ್ಥೆಗಳ ಸಹಾಯದಿಂದಲೋ ಅಥವಾ ಖಾಸಗಿ ಸಂಸ್ಥೆಗಳ ಸಹಯೋಗದಿಂದಲೋ ಭಾರತದ ಪ್ರಮುಖ ಭಾಷೆಗಳಿಗಾಗಿ ನಿರ್ಮಿಸಿರುವ ಭಾಷಿಣಿ, ಸರ್ವಂ, AI4Bharat, ಕೃತಿಮ್ ಮುಂತಾದ ದೊಡ್ಡ ಭಾಷಾ ಮಾದರಿಗಳು ಜಾಗತಿಕ ದೊಡ್ಡ ಭಾಷಾ ಮಾದರಿಗಳಿಗಿಂತ ಕನ್ನಡ ಭಾಷೆಯನ್ನು ಮುಖ್ಯವಾಗಿ ಅದರ ವ್ಯಾಕರಣ, ಉಪಭಾಷೆಗಳು ಮತ್ತು ಬಳಕೆ ವೈವಿಧ್ಯಗಳನ್ನು ಚೆನ್ನಾಗಿ ಅರಿತಿರುವುದರಿಂದ ನಿಮಗೆ ಕನ್ನಡದಲ್ಲೇ ವ್ಯವಹರಿಸಲು ಹೆಚ್ಚು ಅನುಕೂಲಕಾರಿ ಆಗಲಿದೆ. ಕನ್ನಡಕ್ಕಾಗಿಯೇ ವಿಶೇಷವಾಗಿ ನಿರ್ಮಿಸಲಾದ ಅಥವಾ ಮಾರ್ಪಡಿಸಲಾದ ಮತ್ತು ಮುಖ್ಯವಾಗಿ ಕನ್ನಡ ದತ್ತಾಂಶದ ಮೇಲೆ ತರಬೇತಿ ಪಡೆದ ಮಾದರಿಗಳಾದ  ಅಂಬಾರಿ, ಕನ್ನಡಜಿಪಿಟಿ, ಕನ್ನಡ ಲಾಮಾ ಇತ್ಯಾದಿ ಮಾದರಿಗಳು ಇನ್ನು ಬೆಳೆವಣಿಗೆಯ ಹಾದಿಯಲ್ಲಿದ್ದು ಮುಂದೆ ಇವು ನಮಗೆ ಭಾಷಾಂತರ/ಅನುವಾದ, ವ್ಯವಹಾರ, ಸಂಶೋಧನೆ ಇತ್ಯಾದಿ ಕೆಲಸಗಳನ್ನು ಕನ್ನಡದಲ್ಲೇ ನಡೆಸಲು ಅನುವುಮಾಡಿಕೊಡಲಿದೆ. ಆದರೆ ಇವೆಲ್ಲವೂ ಈ ಲೇಖನ ಬರೆಯುವಾಗ ಕೆಲವು ಪ್ರಾಯೋಗಿಕ ಬಳಕೆಯ ಅವಕಾಶ ಬಿಟ್ಟರೆ ಜಾಗತಿಕ ದೊಡ್ಡ ಭಾಷಾ ಮಾದರಿಗಳಂತೆ ಸಾಮಾನ್ಯ ಜನರ ನೇರ ಉಪಯೋಗಕ್ಕೆ ಇನ್ನು ಲಭ್ಯವಿಲ್ಲದಿರುವುದು ವಿಷಾದಕರ ವಿಷಯ.

AI ಅನ್ನು ಬಳಸಿ ಕನ್ನಡದ ಬೆಳವಣಿಗೆಗಾಗಿ ಹಮ್ಮಿಕೊಂಡಿರುವ ಯೋಜನೆಗಳು :-

ಕೇಂದ್ರ ಮತ್ತು ರಾಜ್ಯ ಸರಕಾರವು  AI ಅನ್ನು ಬಳಸಿ ಕನ್ನಡವನ್ನು ತಂತ್ರಜ್ಞಾನ ಯುಗಕ್ಕೆ ಸಿದ್ಧಗೊಳಿಸುವುದು, ಶಿಕ್ಷಣ ಮತ್ತು ಭಾಷಾ ಬಳಕೆಯಲ್ಲಿ, ಉದ್ಯೋಗ ಹಾಗು ತಮ್ಮ ವೃತ್ತಿಗಳಲ್ಲಿ ಹಿಂದುಳಿದ ವರ್ಗದವರನ್ನು ಸೇರಿಸಿ ಎಲ್ಲರಿಗೂ ಸಮಾನಾವಕಾಶ  ಮತ್ತು ಸೇರ್ಪಡೆ ಕಲ್ಪಿಸುವುದಕ್ಕಾಗಿ ಅನೇಕ ಯೋಜನೆಗಳನ್ನು ಹಮ್ಮಿ ಕೊಂಡಿವೆ. ಅವುಗಳಲ್ಲಿ ಪ್ರಮುಖವಾದವು.

  • ಕಲಿಕಾ ದೀಪಾ : AI ಬಳಸಿ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಓದು, ಗಣಿತ ಮತ್ತು ಭಾಷಾ ಕೌಶಲ್ಯಗಳನ್ನು ಮೇಲೇರಿಸುವುದು ಹಾಗು ಅವರ ಸಮಗ್ರ ಕಲಿಕಾ ಮಟ್ಟವನ್ನು ಸುಧಾರಿಸುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.
  • ತರಂಗಿಣಿ : ಈ ಕಾರ್ಯಕ್ರಮದ ಅಡಿಯಲ್ಲಿ, ವಿಶೇಷವಾಗಿ ವಿಕಲಚೇತನ ನಾಗರಿಕರಿಗೆ, ಅದರಲ್ಲೂ ದೃಷ್ಟಿ ವಿಕಲಚೇತನರಿಗೆ, ಜ್ಞಾನವನ್ನು ಸುಲಭವಾಗಿ ತಲುಪಿಸಲು AI-ಚಾಲಿತ ‘ಅಲೆಕ್ಸಾ-ಸಹಾಯಕ ಸಾಧನಗಳನ್ನು’ ವಿತರಿಸಲಾಗುತ್ತಿದೆ. ಈ AI ಸಾಧನಗಳು ಅವರಿಗೆ ಮಾಹಿತಿಯನ್ನು ಧ್ವನಿಯ ಮೂಲಕ ಒದಗಿಸುತ್ತವೆ.
  • AI ಶ್ರುತಿ : ಕೇಂದ್ರ ಸರ್ಕಾರದ ರಾಷ್ಟ್ರೀಯ ಮಾಹಿತಿ ಕೇಂದ್ರ ಅಭಿವೃದ್ಧಿಪಡಿಸಿರುವ ಈ ತಂತ್ರಜ್ಞಾನವು ಧ್ವನಿಯನ್ನು ಪಠ್ಯಕ್ಕೆ ಪರಿವರ್ತಿಸುವ ಸೇವೆಯನ್ನು ಒದಗಿಸುತ್ತದೆ. ಈ ತಂತ್ರಜ್ಞಾನವನ್ನು ಈಗಾಗಲೇ ಕರ್ನಾಟಕ ಸರ್ಕಾರದ ಆರು ಯೋಜನೆಗಳಲ್ಲಿ ಅಳವಡಿಸಲಾಗಿದ್ದು, ಇದು ಆಡಳಿತಾತ್ಮಕ ಸಭೆಗಳ, ಸಾರ್ವಜನಿಕ ಭಾಷಣಗಳ ದಾಖಲಾತಿ ಮತ್ತು ವಿಶ್ಲೇಷಣೆಯನ್ನು ಕನ್ನಡದಲ್ಲಿಯೇ ಮಾಡಲು ಸಹಾಯ ಮಾಡುತ್ತದೆ.
  • ಕೃಷಿಯಲ್ಲಿ AI : 2017 ರಲ್ಲಿ, ಮೈಕ್ರೋಸಾಫ್ಟ್ ಇಂಡಿಯಾ ಜೊತೆ ಒಪ್ಪಂದ ಮಾಡಿಕೊಂಡು, ರೈತರ ಆದಾಯವನ್ನು ಹೆಚ್ಚಿಸಲು ಕೃತಕ ಬುದ್ಧಿಮತ್ತೆ, ಕ್ಲೌಡ್ ತಂತ್ರಜ್ಞಾನ ಮತ್ತು ಸುಧಾರಿತ ವಿಶ್ಲೇಷಣೆಗಳನ್ನು ಬಳಸಿಕೊಳ್ಳುವ ಯೋಜನೆಗೆ ಸರ್ಕಾರ ಚಾಲನೆ ನೀಡಿತ್ತು.
  • ನಕಲಿ ಸುದ್ದಿ ಪತ್ತೆ : ಸಮಾಜದಲ್ಲಿ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಕರ್ನಾಟಕ ಸರ್ಕಾರವು AI ಅನ್ನು ಬಳಸಿಕೊಂಡು ನಕಲಿ ಸುದ್ದಿಗಳನ್ನು ಪತ್ತೆಹಚ್ಚುವ ವ್ಯವಸ್ಥೆಯನ್ನು ಜಾರಿಗೆ ತರಲು ಯೋಜಿಸಿದೆ.

AI ಅನ್ನು ಬಳಸಿ ನ್ಯಾಯಾಂಗ ವ್ಯವಸ್ಥೆಯಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಹಮ್ಮಿಕೊಂಡ ಯೋಜನೆಗಳು :-

ನ್ಯಾಯಾಂಗ ವ್ಯವಸ್ಥೆಯಲ್ಲಿ AI ಅನ್ನು ಬಳಸಿ ಕನ್ನಡದ ಬಳಕೆಯನ್ನು ಹೆಚ್ಚಿಸಲು ಭಾರತದ ಸರ್ವೋಚ್ಚ ನ್ಯಾಯಾಲಯ ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯವು ರಾಜ್ಯ/ರಾಷ್ಟ್ರೀಯ ಮಟ್ಟದಲ್ಲಿ ಅನೇಕ ಯೋಜನೆಗಳನ್ನು ಹಮ್ಮಿಕೊಂಡಿದೆ. ಅದರಲ್ಲಿ ಮುಖ್ಯವಾದವು ಇಂಗ್ಲಿಷ್‌ನಲ್ಲಿರುವ ನ್ಯಾಯಾಲಯದ ತೀರ್ಪುಗಳನ್ನು ಮತ್ತು ಕಾನೂನು ದಾಖಲೆಗಳನ್ನು ಕನ್ನಡಕ್ಕೆ ಅನುವಾದಿಸುವುದು, ನ್ಯಾಯಾಲಯ ಸಿಬ್ಬಂದಿಯ ಕೆಲಸಗಳನ್ನು ಆಟೋಮೇಟ್ ಮಾಡುವುದು, ವಾದಗಳನ್ನು ಮತ್ತು ನ್ಯಾಯಾಲಯದ ಸಲ್ಲಿಕೆಗಳನ್ನು ಡಿಜಿಟಲೀಕರಣ ಗೊಳಿಸುವುದು ಇತ್ಯಾದಿ. ಆ ಯೋಜನೆಗಳಲ್ಲಿ ಪ್ರಮುಖವಾದವು ಇಂತಿವೆ :

  • E-Courts : ಭಾರತ ಸರ್ಕಾರದ ಇ-ಕೋರ್ಟ್ ಯೋಜನೆ ನ್ಯಾಯಾಂಗ ವ್ಯವಸ್ಥೆಯನ್ನು ಡಿಜಿಟಲ್‌ಗೊಳಿಸಿ, ಅದರಿಂದ ಪಾರದರ್ಶಕತೆ, ವೇಗ ಮತ್ತು ಪ್ರಜೆಗಳಿಗೆ ಸುಲಭ ಪ್ರವೇಶವನ್ನು ಒದಗಿಸುವ ಉದ್ದೇಶದಿಂದ ರೂಪುಗೊಂಡಿದೆ. ಈಗ ಈ ಯೋಜನೆಯಲ್ಲಿ ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಹಂತಹಂತವಾಗಿ ಅಳವಡಿಸುವ ಪ್ರಕ್ರಿಯೆ ಆರಂಭವಾಗಿದೆ. ಕನ್ನಡ ಸೇರಿದಂತೆ ಎಲ್ಲಾ ಭಾರತೀಯ ಭಾಷೆಗಳಲ್ಲಿ ನ್ಯಾಯಾಂಗ ಸೇವೆಗಳು ಲಭ್ಯವಾಗುವಂತೆ ಮಾಡಲು AI ಪ್ರಮುಖ ಪಾತ್ರವಹಿಸಲಿದೆ. ಇದರ ಪ್ರಮುಖ ಉದ್ದೇಶಗಳಲ್ಲಿ AI ಬಳಸಿ ಭಾಷಾಂತರ/ಅನುವಾದ  ಮತ್ತು ದಾಖಲೆ ಸಂಗ್ರಹಣೆ ವ್ಯವಸ್ಥೆ ಸುಧಾರಣೆ ಸೇರಿದೆ. ಮುಂದಿನ ಹಂತದಲ್ಲಿ eCourts ಯೋಜನೆ AI ಆಧಾರಿತ ಕನ್ನಡ ಸೇರಿ ಇತರ ಪ್ರಮುಖ ಭಾಷೆಗಳಲ್ಲಿ ಧ್ವನಿಯಿಂದ ವಾಕ್ಯ ಗುರುತಿಸುವಿಕೆ  (speech-to-text) ತಂತ್ರಜ್ಞಾನವನ್ನು ಅಳವಡಿಸಲು ಯೋಜನೆ ರೂಪಿಸಿದೆ.
  • SUPACE : ಇದು AI-ಚಾಲಿತ ಸಂಶೋಧನಾ ಪೋರ್ಟಲ್ ಆಗಿದ್ದು, ನ್ಯಾಯಾಧೀಶರು ಮತ್ತು ಕಾನೂನು ಸಂಶೋಧಕರಿಗೆ ಕಾನೂನು ಸಂಶೋಧನೆ ಮತ್ತು ಕೇಸ್ ನಿರ್ವಹಣೆಯಲ್ಲಿ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ. ಇದರಲ್ಲೂ ಕನ್ನಡ ಸೇರಿ 18 ಭಾರತದ ಪ್ರಮುಖ ಭಾಷೆಗಳಲ್ಲಿ ವ್ಯವಹರಿಸಲು ಅನುವು ಮಾಡಿಕೊಡುವ ಯೋಜನೆಯಿದೆ.
  • SUVAS : ಇದು ಒಂದು ಕೃತಕ ಬುದ್ಧಿಮತ್ತೆ ಆಧಾರಿತ ಅನುವಾದ ಸಾಫ್ಟ್‌ವೇರ್ ಆಗಿದೆ, ಇದನ್ನು ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಇಂಗ್ಲಿಷ್‌ನಿಂದ ಭಾರತದ ಪ್ರಾದೇಶಿಕ ಭಾಷೆಗಳಿಗೆ (ಕನ್ನಡ ಸೇರಿದಂತೆ) ಅನುವಾದಿಸಲು ಅಭಿವೃದ್ಧಿಪಡಿಸಲಾಗಿದೆ. ಇದನ್ನು ಶೀಘ್ರದಲ್ಲೇ E-Courts ಕಾರ್ಯಕ್ರಮದ ಮೂರನೇ ಹಂತದಲ್ಲಿ ಎಲ್ಲಾ ಹೈ ಕೋರ್ಟುಗಳಲ್ಲೂ ಅಳವಡಿಸುವ ಯೋಜನೆಯಿದೆ.
  • ಅದಾಲತ್ AI : ಇದೊಂದು ಖಾಸಗಿ ಸಂಸ್ಥೆಯ ತಂತ್ರಜ್ಞಾನವಾಗಿದ್ದು, ಇದರ ಉದ್ದೇಶ ನ್ಯಾಯಾಲಯಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವುದು, ದಾಖಲೆ ಪ್ರಕ್ರಿಯೆ ಸುಲಭಗೊಳಿಸುವುದು ಮತ್ತು ಸಾಮಾನ್ಯ ನಾಗರಿಕರಿಗೆ ನ್ಯಾಯದ ಪ್ರಕ್ರಿಯೆ ಹೆಚ್ಚು ಪಾರದರ್ಶಕವಾಗಿ ತಲುಪಿಸುವುದಾಗಿದೆ. ಇದನ್ನು ಕರ್ನಾಟಕದ ನ್ಯಾಯಾಲಯಗಳಲ್ಲಿ ನ್ಯಾಯದೀಶರು ವಾಣಿ ಗುರುತಿಸುವಿಕೆ (speech-to-text) ಹಾಗೂ ಡಾಕ್ಯುಮೆಂಟ್ ಸ್ವಯಂಚಾಲಿತಗೊಳಿಸುವಿಕೆ (document automation) ವ್ಯವಸ್ಥೆಗಳಲ್ಲಿ ಉಪಯೋಗಿಸುತ್ತಿದ್ದಾರೆ.

ಕೊನೆಯ ಮಾತು :-

AI ಕನ್ನಡದ ಬೆಳವಣಿಗೆಗೆ ಕೇವಲ ತಂತ್ರಜ್ಞಾನೀಕರಣವಲ್ಲ, ಅದು ಭಾಷೆಯ ಹೊಸ ಪುನರ್ಜನ್ಮದ ಮಾರ್ಗವಾಗಿದೆ.  ಸರ್ಕಾರ, ಶಿಕ್ಷಣ ಸಂಸ್ಥೆಗಳು, ಖಾಸಗಿ ಸಂಸ್ಥೆಗಳು, ತಂತ್ರಜ್ಞಾನ ವಲಯ — ಎಲ್ಲರೂ ಸೇರಿ ಕನ್ನಡವನ್ನು ಡಿಜಿಟಲ್ ಯುಗಕ್ಕೆ ತರುವ ಪ್ರಯತ್ನದಲ್ಲಿದ್ದಾರೆ. ಶಿಕ್ಷಣದಿಂದ ನ್ಯಾಯಾಂಗದವರೆಗೆ, ರೈತರಿಂದ ವಿದ್ಯಾರ್ಥಿವರೆಗೆ — AI ಕನ್ನಡದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. “ಕಲಿಕಾ ದೀಪಾ”, “AI ಶ್ರುತಿ”, “ಅದಾಲತ್ AI” ಮುಂತಾದ ಯೋಜನೆಗಳು ಕನ್ನಡದ ತಂತ್ರಜ್ಞಾನೀಕರಣದ ನಿದರ್ಶನಗಳು. ನಾವು AI ಮಾದರಿಗಳಲ್ಲಿ ಕನ್ನಡದಲ್ಲೆ ಹುಡುಕಬೇಕು, ಬರೆಯಬೇಕು, ಮಾತನಾಡಬೇಕು ಮತ್ತು AI ಉಪಕರಣಗಳಲ್ಲಿ ಕನ್ನಡದ ಬಳಕೆಯನ್ನು ಹೆಚ್ಚಿಸಬೇಕು. ಏಕೆಂದರೆ ಬಳಕೆ ಹೆಚ್ಚಿದಂತೆ AI ಕನ್ನಡವನ್ನು ಹೆಚ್ಚು ಕಲಿಯುತ್ತದೆ, ಹೆಚ್ಚು ಬಲಗೊಳ್ಳುತ್ತದೆ ಮತ್ತು ಕನ್ನಡಕ್ಕೆ/ಕನ್ನಡದಲ್ಲಿ ಉತ್ತಮವಾಗಿ ಪ್ರತಿಕ್ರಯಿಸುತ್ತದೆ. ಹೀಗಾಗಿ AI ಕನ್ನಡಕ್ಕೆ ಮಾರಕವಲ್ಲ — ಅದು ಕನ್ನಡದ ಬೆಳವಣಿಗೆಗೆ ಪೂರಕ ಶಕ್ತಿ ಆಗಲಿದೆ.

ಕನ್ನಡ
ಕೃತಕ ಬುದ್ಧಿಮತ್ತೆ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ